ಔರಾದ: ಔರಾದ್ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ವತಿಯಿಂದ ತಾಲೂಕಿನಾದ್ಯಂತ ಸಮಯಕ್ಕೆ ಸರಿಯಾಗಿ ಬಸ್ ಸಂಚಾರಕ್ಕೆ ಆಗ್ರಹಿಸಿ ಬಸ್ ನಿಲ್ದಾಣದ ಎದುರಲ್ಲಿ ಪ್ರತಿಭಟನೆ ನಡೆಸಲಾಯಿತು.
ಕರವೇ ತಾಲೂಕು ಅಧ್ಯಕ್ಷ ಅನಿಲ್ ದೇವಕತೆ ಮಾತನಾಡಿ, ಬಸ್ ಪಾಸ್ ಹೊಂದಿರುವ ಮಕ್ಕಳಿಗೆ, ಸಾರ್ವಜನಿಕರಿಗೆ ಸಂಚಾರಕ್ಕೆ ಅನಾನುಕೂಲ ಆಗದಿರಲಿ, ಹಳೆ ಬಸ್ ಗಳ ಬದಲಿಗೆ ಹೊಸ ಬಸ್ ಗಳ ವ್ಯವಸ್ಥೆ ಮಾಡುಬೇಕು, ನಿಲ್ದಾಣವು ಸದಾ ಸ್ವಚ್ಛತೆಯಿಂದ ಕೂಡಿರಬೇಕು. ಗಡಿ ಭಾಗದಲ್ಲಿ ಹಳ್ಳಿ ಮತ್ತು ತಾಂಡಗಳಿಗೆ ಬಸ್ ವ್ಯವಸ್ಥೆ ಮಾಡುಬೇಕು ಮತ್ತು ದೂರದ ಮುಂಬೈ, ಬೆಂಗಳೂರು ಕಲಬುರ್ಗಿ, ಹೈದರಾಬಾದ್ ನಗರಗಳಿಗೆ ತೆರಲು ಉತ್ತಮ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.
ಕರವೇ ಗೌರವಾಧ್ಯಕ್ಷ ಬಸವರಾಜ ಶಟ್ಕರ್ ಮಾತನಾಡಿ, ಹಲವು ಸಲ ವ್ಯವಸ್ಥಾಪಕರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಕೋವಿಡ್ ಸಂದರ್ಭದಿಂದ ಇಲ್ಲಿಯವರೆಗೂ ಯಾವ ಗ್ರಾಮಕ್ಕೂ ಸಮರ್ಪಕವಾಗಿ ಬಸ್ ಸಂಚಾರವಿಲ್ಲದೇ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ನಡೆದ ಹಿನ್ನಲೆ ಕೆಲಕಾಲ ಬಸ್ ಗಳ ಸಂಚಾರ ಸ್ಥಗಿತವಾಗಿತ್ತು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ನರಸಿಂಗ ಹಕ್ಕೆ, ಅರ್ಜುನ್ ಭಂಗೆ, ನವೀನ್ ರೆಡ್ಡಿ, ವಿಲ್ಸನ್, ಕೃಷ್ಣ, ಬಾಬು ರಾಠೋಡ್ ಸೇರಿದಂತೆ ವಿವಿಧ ಶಾಲಾ ಕಾಲೇಜಿನ ಮಕ್ಕಳು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.