ಔರಾದ: ಸಕಲ ಜೀವರಾಶಿಗಳ ಮೂಲ ನೀರು. ನೀರಿಲ್ಲದ ಬದುಕು ಊಹೆಗೂ ನಿಲುಕದ್ದು. ಹೀಗಾಗಿ ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ರಿಲಾಯನ್ಸ್ ಫೌಂಡೇಶನ್ ಬೀದರ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಮಚಂದ್ರ ಸೇರಿಕಾ ಹೇಳಿದರು.
ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿ ನಡೆದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕಾಡಿನ ನಾಶದಿಂದ ಸರಿಯಾಗಿ ಮಳೆಯಾಗದೆ ನೀರಿನ ಕೊರತೆ ಎದುರಾಗುತ್ತಿದೆ. ಬಯಲು ಸೀಮೆಯಂತಹ ಪ್ರದೇಶಗಳಲ್ಲಿ ಬೇಸಿಗೆ ಬಂತೆಂದರೆ ಸಾಕು ಎಲ್ಲೆಡೆ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ ಎನ್ನುವುದು ದುರಂತ. ಇಂತಹ ಸಮಸ್ಯೆಗಳಿಗೊಂದು ಪರಿಹಾರ ನೀಡಬೇಕು. ಮುಂದಿನ ಪೀಳಿಗೆಗೆ ನೀರಿನ ಮಹತ್ವವನ್ನು ತಿಳಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರತೀ ವರ್ಷ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ.
ನೀರಿನ ಕೊರತೆಯ ಬಗ್ಗೆ ಎಲ್ಲರೂ ಜಾಗೃತಿ ಮೂಡಿಸಲು ಮುಂದೆ ಬರಬೇಕು. ಇಂದಿನ ದಿನಗಳಲ್ಲಿ ನೀರಿನ ಸಂರಕ್ಷಣೆ ಅತೀ ಅಗತ್ಯವಾಗಿದೆ. ಭೂಮಿಯ ಮೇಲೆ ಸುಮಾರು 70 ಪ್ರತಿಶತದಷ್ಟು ನೀರು ಆವರಿಸಿದ್ದರೆ, ಸಿಹಿನೀರು ಅದರ ಶೇ. 3ರಷ್ಟಿದೆ. ಪ್ರಪಂಚದಾದ್ಯಂತ ಸುಮಾರು ಶತಕೋಟಿ ಜನರು ಶುದ್ಧ ನೀರಿನ್ನು ಪಡೆಯುವುದಿಲ್ಲ ಮತ್ತು ಒಟ್ಟು 2.7 ಶತಕೋಟಿ ಜನರು ವರ್ಷದಲ್ಲಿ ಕನಿಷ್ಠ ಒಂದು ತಿಂಗಳ ಕಾಲ ನೀರಿನ ಕೊರತೆಯನ್ನು ಅನುಭವಿಸುತ್ತಾರೆ. ಆದ್ದರಿಂದ ನೀರಿನ ಮಿತ ಬಳಕೆ ಅಗತ್ಯವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಬಾಲಜಿ ಮೇತ್ರೆ ಮಾತನಾಡಿದರು. ಈ ವೇಳೆ ಶಂಕ್ರಯ್ಯ ಸ್ವಾಮಿ, ಕಾಶಿನಾಥ್ ಬೆಳ್ಳೆ, ಕಲ್ಲಪ್ಪ ಬಿರಾದರ, ಸಂತೋಷ, ಬಸವರಾಜ, ದತ್ತಾತ್ರಿ, ವಾಹಿದ್, ಖಾಜಾಮಿಯ, ಸಂದೀಪ್, ಭೋಜಪ್ಪ, ಮಹಾದೇವ ಇತರರಿದ್ದರು.