ಔರಾದ: ಅಬಕಾರಿ ಇಲಾಖೆಯು ಮಿಂಚಿನ ಕಾರ್ಯಾಚರಣೆ ಮಾಡಿದ್ದು, 168.480 ಲೀಟರ್ ಮದ್ಯ ಹಾಗೂ 39.12 ಲೀಟರ್ ಬಿಯರ್ ಬಾಟಲಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನ ಗಡಿ ಭಾಗದಲ್ಲಿ ಕಾರ್ಯಾಚರಣೆ ನಡೆಸಿದ ಅಬಕಾರಿ ಪೊಲೀಸರು ಕಾರಿನಲ್ಲಿ ಸಾಗಿಸುತ್ತಿದ್ದ ಮದ್ಯ ಹಾಗೂ ಬಿಯರ್ ಬಾಟಲಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ತೆಲಂಗಾಣದ ಗಡಿಯಲ್ಲಿರುವ ವಡಗಾಂವ-ಜಂಬಗಿ ರಸ್ತೆಯ ಮಹಾರಾಜವಾಡಿ ಕ್ರಾಸ್ ಬಳಿ ಮಹಾರಾಷ್ಟ್ರ ಮೂಲದ ಟಾಟಾ ಇಂಡಿಕಾ ಕಾರು ಜಪ್ತಿ ಮಾಡಿಕೊಂಡು ಅದರಲ್ಲಿದ್ದ ಮದ್ಯ ಹಾಗೂ ಬಿಯರ್ ಬಾಟಲಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಈ ಪ್ರಕರಣದ ಆರೋಪಿ ಬಾಲಾಜಿ ಜಾಧವ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಅಬಕಾರಿ ಇಲಾಖೆ ಮೇಲಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಅಬಕಾರಿ ಉಪ ನಿರೀಕ್ಷಕರಾದ ದಿಲೀಪಸಿಂಗ್ ಠಾಕೂರ್ ಹಾಗೂ ರಾಜಕುಮಾರ, ಅಬ್ದುಲ್ ಅತಿಕ್ ಹಾಗೂ ಇತರೆ ಸಿಬ್ಬಂದಿ ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂ ಡಿದ್ದರು.