ಔರಾದ: ಜನ ಸೇವೆಯೇ ನನ್ನ ಜೀವನದ ಪರಮ ಗುರಿಯಾಗಿದ್ದು, ಜನರ ಸಂತೋಷದಲ್ಲಿಯೇ ನನ್ನ ಸಂತೋಷವನ್ನು ಕಾಣುತ್ತೇನೆ ಎಂದು ಪಶು ಸಂಗೋಪನೆ ಸಚಿವ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು. ಭಾರತೀಯ ಜನತಾ ಪಕ್ಷ ಔರಾದ(ಬಾ) ಮಂಡಲ ವತಿಯಿಂದ ಔರಾದ(ಬಾ) ಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಔರಾದ(ಬಾ) ಕ್ಷೇತ್ರದಲ್ಲಿ ಕಳೆದ ಮೂರು ಅವಧಿಗೆ ಶಾಸಕನಾಗಿ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. 2008ಕ್ಕಿಂತ ಮುಂಚೆ ಸಾಕಷ್ಟು ಹಿಂದುಳಿದಿದ್ದ ಕ್ಷೇತ್ರ ನಾನು ಶಾಸಕನಾದ ನಂತರ ಕ್ಷೇತ್ರದೆಲ್ಲೆಡೆ ಅಭಿವೃದ್ಧಿ ಸಾಧಿಸಲಾಗುತ್ತಿದೆ. ಎಲ್ಲ ಗ್ರಾಮಗಳಿಗೆ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವ ಕೆಲವನ್ನು ಮಾಡುತ್ತಾ ಬಂದಿದ್ದೇನೆ. ಕಷ್ಟವೆಂದು ಹೇಳಿಕೊಂಡು ಬರುವ ಎಲ್ಲರಿಗೂ ನೆರವು ನೀಡುವ ಪ್ರಯತ್ನ ಮಾಡಿದ್ದೇನೆ. ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಶಾಲಾ ಕಾಲೇಜು, ಅಂಗನವಾಡಿ ಕೇಂದ್ರ, ಸಿಸಿ ರಸ್ತೆ, ಚರಂಡಿಯಂತಹ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು. ಜನತೆ ನನಗೆ ಸಾಕಷ್ಟು ಪ್ರೀತಿ ವಿಶ್ವಾಸ ನೀಡಿದ್ದಾರೆ. ಅವರ ಆಶೀರ್ವಾದದಿಂದಾಗಿ ಶಾಸಕನಾಗಿ, ಸಚಿವನಾಗಿ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಜನರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ. ತಮ್ಮ ಆಶೀರ್ವಾದ ಹೀಗೆಯೇ ಇರಬೇಕೆಂದು ಕೋರಿದರು.
ಸರ್ಕಾರ ನೀಡಿರುವ ಒಳ ಮೀಸಲಾತಿ ಕುರಿತಂತೆ ಕೆಲವರು ತಪ್ಪು ಮಾಹಿತಿಗಳನ್ನು ಹರಡಿಸುತ್ತಾ ಜನರಲ್ಲಿ ಗೊಂದಲ ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿಯಲ್ಲಿರುವ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಬಂಜಾರಾ, ಭೋವಿ, ಕೊರಮ, ಕೊರಚ ಸಮುದಾಯವನ್ನು ಎಸ್ಸಿ ಪಟ್ಟಿಯಿಂದ ತೆಗೆಯಲಾಗುತ್ತದೆ ಎನ್ನುವ ಸುಳ್ಳನ್ನು ಹರಡಿಸಲಾಗುತ್ತಿದೆ. ನನ್ನ ಜೀವಿತಾವಧಿಯಲ್ಲಿ ಯಾವುದೇ ಕಾರಣಕ್ಕೂ ಯಾವೊಂದು ಸಮಾಜಗಳಿಗೂ ಅನ್ಯಾಯ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.
ದೇಶ ಸ್ವಾತಂತ್ರ್ಯವಾದ ನಂತರ ಇಲ್ಲಿಯವರೆಗೂ ಬಂಜಾರಾ ಸಮಾಜದ ಹಲವು ಕುಟುಂಬಗಳು ಸ್ವಂತ ಮನೆಗಳಿಲ್ಲದೇ ಸಾಕಷ್ಟು ತಾಪತ್ರಯ ಎದುರಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಮಾರು 51 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಮೂಲಕ ಐತಿಹಾಸಿಕ ಕೆಲಸವನ್ನು ಮಾಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ಇಂತಹ ಅನೇಕ ಸಾಧನೆಗಳು ಬಿಜೆಪಿ ನೇತೃತ್ವದ ಸರ್ಕಾರದಿಂದ ಆಗಿವೆ ಎಂದರು.
ಔರಾದ(ಬಿ) ಪಟ್ಟಣದ ಯುವಜನತೆಗೆ ಉದ್ಯೋಗಗಳನ್ನು ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಿದ್ದು, ಕ್ಷೇತ್ರಕ್ಕೆ ಸಣ್ಣಪುಟ್ಟ ಕಾರ್ಖಾನೆಗಳನ್ನು ತರಲು ಯತ್ನಿಸುತ್ತಿದ್ದೇನೆ. ಇದಕ್ಕೆ ಬೇಕಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಯುವಕರು ಉದ್ಯೋಗಕ್ಕಾಗಿ ಬೇರೆಡೆಗೆ ಹೋಗುವ ಅಗತ್ಯವಿರುವುದಿಲ್ಲ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಔರಾದ ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ವಸಂತ ಬಿರಾದಾರ, ಸುರೇಶ ಭೋಸ್ಲೆ, ಬನ್ಸಿ ಮಹಾರಾಜ, ಪ್ರಕಾಶ ಘೂಳೆ, ಕೇರಬಾ ಪವಾರ, ರಾಜಕುಮಾರ ಪೋಕಲವಾರ, ಶಿವಾಜಿರಾವ ಪಾಟೀಲ ಮುಂಗನಾಳ, ಕೇರಬಾ ಪವಾರ, ಶರಣಪ್ಪ ಪಂಚಾಕ್ಷರಿ, ಸಚಿನ್ ರಾಠೋಡ್, ಪ್ರದೀಪ ಪವಾರ, ಪ್ರತೀಕ ಚವ್ಹಾಣ, ಹಣಮಂತ ಸುರನಾರ, ಖಂಡೋಬಾ ಕಂಗಟೆ, ರಾಜು ಪೋಕಲವಾರ, ಸುಜಿತ್ ರಾಠೋಡ್, ಬಾಲಾಜಿ ಠಾವರೆ, ಎಂ.ಡಿ ಸಲಾವುದ್ದೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.